ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ 15 ಬೇನಾಮಿ ಹೆಸರಿನ ಬ್ಯಾಂಕ್ ಖಾತೆಗಳ ಮೂಲಕ ಸುಮಾರು ₹82 ಕೋಟಿ ರೂಪಾಯಿ ವಹಿವಾಟು ನಡೆಸಿದ ಸೈಬರ್ ವಂಚನೆ ಜಾಲ ಪತ್ತೆಯಾಗಿ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು ಶಿವಮೊಗ್ಗ ಜಿಲ್ಲೆಯ ಶರಾವತಿ ನಗರದ ಜಗದೀಶ್ (43), ಚಿಕ್ಕಮಗಳೂರಿನ ಅರ್ಷಾದ್ (39) ಹಾಗೂ ಶಿವಮೊಗ್ಗ ಹೊಸಮನೆ ಬಡಾವಣೆಯ ಅನಂತ (34) ಎಂದು ಗುರುತಿಸಲಾಗಿದೆ. ಆರೋಪಿಗಳು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 15 ಬ್ಯಾಂಕ್ ಖಾತೆಗಳನ್ನು ತೆರೆಯಿಸಿಕೊಂಡು, ಅವುಗಳನ್ನು ತೆರೆಮರೆಯಲ್ಲಿ ನಿರ್ವಹಿಸುತ್ತಿದ್ದರು.
ಪೊಲೀಸರ ಪ್ರಕಾರ, ಈ ಖಾತೆಗಳ ವಿರುದ್ಧ ದೇಶಾದ್ಯಂತ 352ಕ್ಕೂ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ತನಿಖೆಯ ಪ್ರಾಥಮಿಕ ಹಂತದಲ್ಲಿ 15 ಖಾತೆಗಳಲ್ಲಿ ಒಟ್ಟು ₹14.71 ಕೋಟಿ ಹಣದ ಹಾದಿ ಪತ್ತೆಯಾಗಿದೆ. ಒಟ್ಟು ವಹಿವಾಟು ಸುಮಾರು ₹82 ಕೋಟಿ ರೂಪಾಯಿಗೆ ತಲುಪಿರುವ ಶಂಕೆ ವ್ಯಕ್ತವಾಗಿದೆ.
ವಶಪಡಿಸಿಕೊಂಡ ವಸ್ತುಗಳು:
- 2 ಮೊಬೈಲ್ ಫೋನ್ಗಳು
- 11 ಎಟಿಎಂ ಕಾರ್ಡ್ಗಳು
- 9 ಕ್ಯೂಆರ್ ಕೋಡ್ ಸ್ಕ್ಯಾನರ್ಗಳು
- 15 ಏರ್ಟೆಲ್ ಸಿಮ್ ಕಾರ್ಡ್ಗಳು
ಶಿವಮೊಗ್ಗನಲ್ಲಿ ವಿಲ್ಸನ್ ಎಂಬವರು ನೀಡಿದ ವಂಚನೆ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ಈ ಬೇನಾಮಿ ಖಾತೆಗಳ ಜಾಲ ಬೆಳಕಿಗೆ ಬಂದಿದೆ. ಇನ್ನೂ ಹೆಚ್ಚಿನ ಸಂಪರ್ಕಗಳಿಗಾಗಿ ತನಿಖೆ ಮುಂದುವರಿದಿದೆ.